ಆದುದರಿಂದ ರಾಜನ ಸೇವಕರು ಇಸ್ರೇಲಿನ ಎಲ್ಲ ಕಡೆಗಳಲ್ಲೂ ಯುವತಿಯೊಬ್ಬಳನ್ನು ಹುಡುಕಲಾರಂಭಿಸಿದರು. ಅವರು ರಾಜನನ್ನು ಬೆಚ್ಚಗಿಡಲು ಒಬ್ಬ ಸುಂದರ ಹುಡುಗಿಯನ್ನು ಹುಡುಕಲಾರಂಭಿಸಿದರು. ಅವರಿಗೆ ಅಬೀಷಗ್ ಎಂಬ ಹೆಸರಿನ ಯುವತಿಯು ಸಿಕ್ಕಿದಳು. ಅವಳು ಶೂನೇಮ್ ನಗರದವಳು. ಅವರು ಆ ಯುವತಿಯನ್ನು ರಾಜನ ಬಳಿಗೆ ಕರೆದುಕೊಂಡು ಬಂದರು.
ರಾಜನಾದ ದಾವೀದನ ಮಗನಾದ ಅದೋನೀಯನು ಬಹಳ ಗರ್ವಿಷ್ಠನಾದನು. ಅವನು, “ನಾನೇ ರಾಜನಾಗುತ್ತೇನೆ” ಎಂದು ಹೇಳಿಕೊಂಡನು. (ಅದೋನೀಯನ ತಾಯಿಯ ಹೆಸರು ಹಗ್ಗೀತ.) ಅದೋನೀಯನು ರಾಜನಾಗಬೇಕೆಂಬುದಾಗಿ ಬಹಳ ಆಸೆಪಟ್ಟನು. ಆದುದರಿಂದ ಅವನು ತನಗಾಗಿ ಒಂದು ರಥವನ್ನು, ಕುದುರೆಗಳನ್ನು ಮತ್ತು ರಥದ ಮುಂದೆ ಓಡುವಂತಹ ಐವತ್ತು ಜನರನ್ನು ಪಡೆದನು.
ರಾಜನಾದ ದಾವೀದನು ತನ್ನ ಮಗನಾದ ಅದೋನೀಯನನ್ನು ಎಂದೂ ತಿದ್ದಲಿಲ್ಲ. ದಾವೀದನು, “ನೀನು ಹೀಗೇಕೆ ಮಾಡುತ್ತಿರುವೆ?” ಎಂದು ಅವನನ್ನು ಒಂದು ಸಾರಿಯಾದರೂ ಕೇಳಲಿಲ್ಲ. ಅದೋನೀಯನು ಅಬ್ಷಾಲೋಮನ ಬಳಿಕ ಹುಟ್ಟಿದ ಮಗ. ಅದೋನೀಯನು ಬಹಳ ಸುಂದರನಾಗಿದ್ದನು.
ಆದರೆ ಅದೋನೀಯನ ಕಾರ್ಯವನ್ನು ಒಪ್ಪದ ಅನೇಕರು ದಾವೀದನಿಗೆ ನಂಬಿಗಸ್ತರಾಗಿದ್ದರು. ಇವರು ಯಾರೆಂದರೆ: ಯಾಜಕನಾದ ಚಾದೋಕ, ಯೆಹೋಯಾದಾವನ ಮಗನಾದ ಬೆನಾಯ, ಪ್ರವಾದಿಯಾದ ನಾತಾನ, ಶಿಮ್ಮೀ, ರೇಗೀ ಮತ್ತು ರಾಜನಾದ ದಾವೀದನ ವಿಶೇಷ ಅಂಗರಕ್ಷಕರು. ಇವರಲ್ಲಿ ಯಾರೂ ಅದೋನೀಯನ ಸಂಗಡ ಸೇರಲಿಲ್ಲ.
ಒಂದು ದಿನ, ಅದೋನೀಯನು ಎನ್ರೋಗೆಲಿನ ಹತ್ತಿರದ ಚೋಹೆಲೆತ್ ಎಂಬ ಬಂಡೆಯ ಬಳಿ ಕೆಲವು ಕುರಿಗಳನ್ನು, ಹಸುಗಳನ್ನು ಮತ್ತು ಕೊಬ್ಬಿದ ಕರುಗಳನ್ನು ಸಮಾಧಾನಯಜ್ಞವಾಗಿ ಅರ್ಪಿಸಿದನು. ಅದೋನೀಯನು ತನ್ನ ಸಹೋದರರನ್ನು (ರಾಜನ ಇತರ ಗಂಡುಮಕ್ಕಳನ್ನು) ಮತ್ತು ಯೆಹೂದದ ಅಧಿಕಾರಿಗಳನ್ನು ಆಹ್ವಾನಿಸಿದನು.
ನಾತಾನನಿಗೆ ಇದು ತಿಳಿದಾಗ, ಅವನು ಸೊಲೊಮೋನನ ತಾಯಿಯಾದ ಬತ್ಷೆಬೆಳ ಬಳಿಗೆ ಹೋಗಿ, “ಹಗ್ಗೀತಳ ಮಗನಾದ ಅದೋನೀಯನು ಮಾಡುತ್ತಿರುವುದನ್ನು ನೀನು ಕೇಳಿದೆಯಾ? ಅವನು ತನ್ನನ್ನು ತಾನೇ ರಾಜನನ್ನಾಗಿ ಮಾಡಿಕೊಂಡಿದ್ದಾನೆ ಮತ್ತು ನಮ್ಮ ಒಡೆಯನಾದ ರಾಜ ದಾವೀದನಿಗೆ ಇದು ತಿಳಿದಿಲ್ಲ.
ರಾಜನಾದ ದಾವೀದನ ಬಳಿಗೆ ಹೋಗಿ ಅವನಿಗೆ, ‘ನನ್ನ ಒಡೆಯನಾದ ರಾಜನೇ, ನನ್ನ ಮಗನಾದ ಸೊಲೊಮೋನನು ನಿನ್ನ ನಂತರದ ರಾಜನೆಂದು ನೀನು ನನಗೆ ವಾಗ್ದಾನ ಮಾಡಿದ್ದೆ. ಹೀಗಿರುವಾಗ ಅದೋನೀಯನು ನೂತನ ರಾಜನಾದದ್ದು ಏಕೆ?’ ಎಂದು ಹೇಳು.
ಬತ್ಷೆಬೆಳು, “ನನ್ನ ಒಡೆಯನೇ, ನಿನ್ನ ದೇವರಾದ ಯೆಹೋವನ ಆಣೆಯಾಗಿ ನೀನು ನನಗೆ ಒಂದು ವಾಗ್ದಾನವನ್ನು ಮಾಡಿದ್ದೆ. ‘ನನ್ನ ನಂತರ ನಿನ್ನ ಮಗ ಸೊಲೊಮೋನನು ರಾಜನಾಗುವನು. ಸೊಲೊಮೋನನು ನನ್ನ ಸಿಂಹಾಸನದ ಮೇಲೆ ಕುಳಿತು ಆಳುವನು’ ಎಂಬುದೇ ಆ ಪ್ರಮಾಣ.
ಅದೋನೀಯನು ಅನೇಕ ಹಸುಗಳನ್ನು, ಕೊಬ್ಬಿದ ಕರುಗಳನ್ನು ಮತ್ತು ಕುರಿಗಳನ್ನು ಸಮಾಧಾನಯಜ್ಞವಾಗಿ ಅರ್ಪಿಸಿದ್ದಾನೆ. ಅವನು ನಿನ್ನ ಎಲ್ಲಾ ಗಂಡುಮಕ್ಕಳನ್ನು ಆಹ್ವಾನಿಸಿದ್ದನು. ಅವನು ಯಾಜಕನಾದ ಎಬ್ಯಾತಾರನನ್ನು ಮತ್ತು ನಿನ್ನ ಸೇನಾಧಿಪತಿಯಾದ ಯೋವಾಬನನ್ನು ಆಹ್ವಾನಿಸಿದ್ದನು. ಆದರೆ ಅವನು ನಿನ್ನ ಸೇವೆಮಾಡುವ ನಿನ್ನ ಮಗನಾದ ಸೊಲೊಮೋನನನ್ನು ಆಹ್ವಾನಿಸಲಿಲ್ಲ.
ಈ ದಿನ ಅವನು ಅನೇಕ ಹೋರಿಗಳನ್ನು ಮತ್ತು ಕುರಿಗಳನ್ನು ಸಮಾಧಾನ ಯಜ್ಞವಾಗಿ ಅರ್ಪಿಸಿದನು. ಅವನು ನಿನ್ನ ಇತರ ಗಂಡುಮಕ್ಕಳನ್ನು, ಸೇನಾಧಿಪತಿಗಳನ್ನು ಮತ್ತು ಯಾಜಕನಾದ ಎಬ್ಯಾತಾರನನ್ನು ಆಹ್ವಾನಿಸಿದ್ದನು. ಅವರು ಈಗ ಅವನೊಡನೆ ತಿನ್ನುತ್ತಾ ಕುಡಿಯುತ್ತಾ ಇದ್ದಾರೆ. ‘ರಾಜನಾದ ಅದೋನೀಯನು ಚಿರಾಯುವಾಗಿರಲಿ’ ಎಂದು ಅವರು ಹೇಳುತ್ತಿದ್ದಾರೆ.
ಅಂದು ನಾನು ನಿನಗೆ ಮಾಡಿದ ಪ್ರಮಾಣವನ್ನು ಇಂದು ಪೂರೈಸುತ್ತೇನೆ. ಇಸ್ರೇಲಿನ ದೇವರಾದ ಯೆಹೋವನ ಹೆಸರಿನಲ್ಲಿ ನಾನು ನಿನಗೆ ಆ ಪ್ರಮಾಣವನ್ನು ಮಾಡಿದ್ದೆನು. ನನ್ನ ನಂತರ ನಿನ್ನ ಮಗ ಸೊಲೊಮೋನನು ರಾಜನಾಗುವನೆಂದೂ ನನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವನೆಂದೂ ನಾನು ನಿನಗೆ ಪ್ರಮಾಣ ಮಾಡಿದ್ದೆನು. ನಾನು ನನ್ನ ವಾಗ್ದಾನವನ್ನು ಈಡೇರಿಸುತ್ತೇನೆ” ಎಂದು ಹೇಳಿದನು.
ಆಗ ರಾಜನಾದ ದಾವೀದನು, “ಯಾಜಕನಾದ ಚಾದೋಕನಿಗೆ, ಪ್ರವಾದಿಯಾದ ನಾತಾನನಿಗೆ ಮತ್ತು ಯೆಹೋಯಾದಾವನ ಮಗನಾದ ಬೆನಾಯನಿಗೆ ಇಲ್ಲಿಗೆ ಬರಲು ಹೇಳು” ಎಂದು ಹೇಳಿದನು. ಈ ಮೂವರು ರಾಜನ ಬಳಿಗೆ ಬಂದರು.
ಅಲ್ಲಿ ಯಾಜಕನಾದ ಚಾದೋಕನು ಮತ್ತು ಪ್ರವಾದಿಯಾದ ನಾತಾನನು ಅವನನ್ನು ಇಸ್ರೇಲಿನ ನೂತನ ರಾಜನನ್ನಾಗಿ ಅಭಿಷೇಕಿಸಲಿ. ಅನಂತರ ತುತ್ತೂರಿಯನ್ನು ಊದಿರಿ; ಎಲ್ಲರೂ ‘ರಾಜನಾದ ಸೊಲೊಮೋನನು ಚಿರಂಜೀವಿಯಾಗಿರಲಿ’ ಎಂದು ಆರ್ಭಟಿಸಲಿ.
ನಂತರ ಅವನೊಂದಿಗೆ ಹಿಂದಿರುಗಿ ಇಲ್ಲಿಗೆ ಬನ್ನಿ. ಸೊಲೊಮೋನನು ನನ್ನ ಸಿಂಹಾಸನದ ಮೇಲೆ ಕುಳಿತುಕೊಂಡು ಹೊಸ ರಾಜನಾಗಿ ರಾಜ್ಯಭಾರ ಮಾಡಲಿ. ನಾನು ಸೊಲೊಮೋನನನ್ನು ಇಸ್ರೇಲಿನ ಮತ್ತು ಯೆಹೂದದ ರಾಜನನ್ನಾಗಿ ಆರಿಸಿದ್ದೇನೆ” ಎಂದು ಹೇಳಿದನು.
ನನ್ನ ಒಡೆಯನಾದ ರಾಜನೇ, ನಿನಗೆ ಯಾವಾಗಲೂ ಸಹಾಯಮಾಡಿದ ಯೆಹೋವನು ಸೊಲೊಮೋನನಿಗೂ ಸಹಾಯ ಮಾಡಲಿ. ನಿನ್ನ ರಾಜ್ಯಕ್ಕಿಂತಲೂ ಸೊಲೊಮೋನನ ರಾಜ್ಯವು ಹೆಚ್ಚು ಬಲಿಷ್ಠವಾಗಲಿ.” ಎಂದು ಉತ್ತರಿಸಿದನು.
ಚಾದೋಕನು, ನಾತಾನನು, ಬೆನಾಯನು ಮತ್ತು ರಾಜನ ಅಧಿಕಾರಿಗಳು ರಾಜನಾದ ದಾವೀದನಿಗೆ ವಿಧೇಯರಾದರು. ಅವರು ಸೊಲೊಮೋನನನ್ನು ರಾಜನಾದ ದಾವೀದನ ಹೇಸರಕತ್ತೆಯ ಮೇಲೆ ಕುಳ್ಳಿರಿಸಿ, ಅವನೊಂದಿಗೆ ಗೀಹೋನಿಗೆ ಹೋದರು.
ಯಾಜಕನಾದ ಚಾದೋಕನು ಪವಿತ್ರಗುಡಾರದಿಂದ ಎಣ್ಣೆಯನ್ನು ತೆಗೆದುಕೊಂಡು ಬಂದನು. ಸೊಲೊಮೋನನು ರಾಜನೆಂದು ತೋರಿಸಲು ಅವನ ತಲೆಯ ಮೇಲೆ ಚಾದೋಕನು ಎಣ್ಣೆಯನ್ನು ಸುರಿದನು. ದಾವೀದನ ಜನರು ತುತ್ತೂರಿಯನ್ನು ಊದಿದರು. ಆಗ ಎಲ್ಲಾ ಜನರೂ, “ರಾಜನಾದ ಸೊಲೊಮೋನನು ಚಿರಂಜೀವಿಯಾಗಿರಲಿ” ಎಂದು ಆರ್ಭಟಿಸಿದರು.
ಆ ಸಮಯಕ್ಕೆ ಅದೋನೀಯನು ಮತ್ತು ಅವನೊಂದಿಗಿದ್ದ ಅತಿಥಿಗಳು ಊಟವನ್ನು ಮುಗಿಸುತ್ತಿದ್ದರು. ಅವರಿಗೆ ತುತ್ತೂರಿಯ ಶಬ್ದವು ಕೇಳಿಸಿತು. ಯೋವಾಬನು, “ಆ ಶಬ್ದವು ಏನು? ನಗರದಲ್ಲಿ ಏನು ನಡೆಯುತ್ತಿದೆ?” ಎಂದು ಕೇಳಿದನು.
ಯೋವಾಬನು ಮಾತನಾಡುತ್ತಿದ್ದಂತೆ, ಯಾಜಕನಾದ ಎಬ್ಯಾತಾರನ ಮಗನಾದ ಯೋನಾತಾನನು ಅಲ್ಲಿಗೆ ಬಂದನು. ಅದೋನೀಯನು, “ಇಲ್ಲಿಗೆ ಬಾ! ನೀನು ಒಬ್ಬ ಒಳ್ಳೆಯ ಮನುಷ್ಯ. ಆದುದರಿಂದ ನೀನು ನನಗೆ ಶುಭ ಸಮಾಚಾರವನ್ನೇ ತಂದಿರುವೆ” ಎಂದು ಹೇಳಿದನು.
ರಾಜನಾದ ದಾವೀದನು ಯಾಜಕನಾದ ಚಾದೋಕನನ್ನು, ಪ್ರವಾದಿಯಾದ ನಾತಾನನನ್ನು, ಯೆಹೋಯಾದಾವನ ಮಗನಾದ ಬೆನಾಯನನ್ನು ಮತ್ತು ರಾಜನ ಎಲ್ಲಾ ಅಧಿಕಾರಿಗಳನ್ನು ಅವನೊಂದಿಗೆ ಕಳುಹಿಸಿದನು. ಅವರು ಸೊಲೊಮೋನನನ್ನು ರಾಜನ ಸ್ವಂತ ಹೇಸರಕತ್ತೆಯ ಮೇಲೆ ಕುಳ್ಳಿರಿಸಿದರು.
ನಂತರ ಯಾಜಕನಾದ ಚಾದೋಕನು ಮತ್ತು ಪ್ರವಾದಿಯಾದ ನಾತಾನನು ಗೀಹೋನ್ ಬುಗ್ಗೆಯ ಹತ್ತಿರ ಸೊಲೊಮೋನನನ್ನು ಅಭಿಷೇಕಿಸಿದರು. ಅನಂತರ ಅವರು ನಗರಕ್ಕೆ ಹೋದರು. ಅವರನ್ನು ಜನರು ಹಿಂಬಾಲಿಸಿದರು. ಈಗ ನಗರದ ಜನರು ತುಂಬಾ ಸಂತೋಷದಿಂದ ಇದ್ದಾರೆ. ಆ ಶಬ್ದವನ್ನೇ ನೀವು ಕೇಳುತ್ತಿರುವುದು.
ಆಗ ಯಾರೋ ಒಬ್ಬರು ಸೊಲೊಮೋನನಿಗೆ, “ಅದೋನೀಯನು ನಿನಗೆ ಬಹಳವಾಗಿ ಹೆದರಿಕೊಂಡು ಪವಿತ್ರಗುಡಾರದ ಯಜ್ಞವೇದಿಕೆಯ ಬಳಿಗೆ ಹೋಗಿ ಯಜ್ಞವೇದಿಕೆಯ ಕೊಂಬುಗಳನ್ನು ಬಿಡದೆ ಹಿಡಿದುಕೊಂಡೇ ಇದ್ದಾನೆ, ‘ನನ್ನನ್ನು ಕೊಲ್ಲುವುದಿಲ್ಲವೆಂದು ಪ್ರಮಾಣ ಮಾಡುವಂತೆ ರಾಜನಾದ ಸೊಲೊಮೋನನಿಗೆ ತಿಳಿಸಿ’ ಎಂಬುದಾಗಿ ಅದೋನೀಯನು ಕೇಳಿಕೊಳ್ಳುತ್ತಿದ್ದಾನೆ” ಎಂದು ಹೇಳಿದನು.
ಆದುದರಿಂದ ಸೊಲೊಮೋನನು, “ಅದೋನೀಯನು ತಾನು ಒಳ್ಳೆಯ ಮನುಷ್ಯನೆಂದು ನಿರೂಪಿಸಿದರೆ ಅವನ ತಲೆಯ ಒಂದು ಕೂದಲಿಗೂ ತೊಂದರೆಯಾಗುವುದಿಲ್ಲವೆಂದು ನಾನು ಪ್ರಮಾಣ ಮಾಡುತ್ತೇನೆ. ಆದರೆ ಅವನೇನಾದರೂ ಕೇಡನ್ನು ಮಾಡಿದರೆ ಸಾಯುವನು” ಎಂದು ಹೇಳಿದನು.
ರಾಜನಾದ ಸೊಲೊಮೋನನು ಅದೋನೀಯನನ್ನು ಕರೆತರಲು ಕೆಲವು ಜನರನ್ನು ಕಳುಹಿಸಿದನು. ಅವರು ಅದೋನೀಯನನ್ನು ರಾಜನಾದ ಸೊಲೊಮೋನನ ಬಳಿಗೆ ಕರೆದುತಂದರು. ಅದೋನೀಯನು ರಾಜನಾದ ಸೊಲೊಮೋನನ ಬಳಿಗೆ ಬಂದು, ಸಾಷ್ಟಾಂಗ ನಮಸ್ಕಾರ ಮಾಡಿದನು. ಸೊಲೊಮೋನನು, “ಮನೆಗೆ ಹೋಗು” ಎಂದನು.